Bengaluru: ಪ್ರೇಯಸಿ ಜೊತೆಗೆ ಬೆಂಗಳೂರಿಗೆ ಬಂದಿದ್ದ ಯುವಕ ಲಾಡ್ಜ್ ನಲ್ಲಿ ಹೆಣವಾಗಿ ಪತ್ತೆ: ಜೊತೆಗಿದ್ದ ಯುವತಿ ನಾಪತ್ತೆ
ಬೆಂಗಳೂರಿನ ಮಡಿವಾಳದ ಲಾಡ್ಜ್ ಒಂದರಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪುತ್ತೂರು ಮೂಲದ ವರ್ಷ ತಕ್ಷಿತ್ (20) ಮೃತ ಯುವಕನಾಗಿದ್ದು, ಈತ ಯುವತಿ ಜೊತೆ ಲಾಡ್ಜ್ನಲ್ಲಿದ್ದ ಎನ್ನಲಾಗ್ತಿದೆ. ಅಕ್ಟೋಬರ್ 17ರ ರಾತ್ರಿ ತಕ್ಷಿತ್ ಶವವಾಗಿ ಪತ್ತೆಯಾಗಿದ್ದಾನೆ. ಜೊತೆಯಲ್ಲಿದ್ದ ಯುವತಿ ನಾಪತ್ತೆಯಾಗಿದ್ದಾಳೆ.
8 ದಿನಗಳ ಹಿಂದೆಯೇ ಈತ ಬೆಂಗಳೂರಿಗೆ ಬಂದಿದ್ದು, ಯುವತಿ ಜೊತೆ ಇದೇ ರೂಮ್ನಲ್ಲಿದ್ದ. ಮೈಸೂರಿನಲ್ಲಿ ಓದೋಕೆ ಹೋಗ್ತೀನಿ ಎಂದು ತಕ್ಷಿತ್ ಬೆಂಗಳೂರಿಗೆ ಬಂದಿದ್ದ ಎನ್ನಲಾಗ್ತಿದೆ. ಅಕ್ಟೋಬರ್ 9ರಂದು ಲಾಡ್ಜ್ನಲ್ಲಿ ತಕ್ಷಿತ್ ರೂಮ್ ಮಾಡಿದ್ದಾನೆ. ವಿರಾಜಪೇಟೆಯ ಯುವತಿ ಜೊತೆ ಬಂದಿದ್ದು, ಇಬ್ಬರೂ 8 ದಿನಗಳ ಕಾಲ ಲಾಡ್ಜ್ನಲ್ಲೇ ಇದ್ದರು.
ಅಕ್ಟೋಬರ್ 17ರ ರಾತ್ರಿ ತಕ್ಷಿತ್ ಶವವಾಗಿ ಪತ್ತೆಯಾಗಿದ್ದಾನೆ. ಯುವಕ ತಕ್ಷಿತ್ ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ. ತಕ್ಷಿತ್ ಹಾಗೂ ಯುವತಿ ಪಣಂಬೂರಿನ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು ಎನ್ನಲಾಗ್ತಿದೆ. ಮೈಸೂರಿನಲ್ಲಿ ಓದೋಕೆ ಹೋಗ್ತೀನಿ ಅಂತ ಹೇಳಿ ಬೆಂಗಳೂರಿಗೆ ಬಂದಿದ್ದಾರೆ.
ಕಳೆದ ಎಂಟು ದಿನವೂ ತಿಂಡಿ, ಊಟ ಪಾರ್ಸೆಲ್ ತರಿಸಿಕೊಂಡೇ ರೂಮ್ನಲ್ಲಿ ಕಾಲ ಕಳೆಯುತ್ತಿದ್ದರು. ನಿನ್ನೆ ಸ್ವಿಗ್ಗಿಯಲ್ಲಿ ತಕ್ಷಿತ್ ಹಾಗೂ ಆಕೆ ಊಟ ತರಿಸಿಕೊಂಡಿದ್ದಾರೆ. ಊಟ ಮಾಡಿದ ಬಳಿಕ ಫುಟ್ ಪಾಯ್ಸನ್ ಆಗಿತ್ತು. ಬಳಿಕ ಇಬ್ಬರೂ ಮೆಡಿಕಲ್ಗೆ ಹೋಗಿ ಮಾತ್ರೆ ತಂದು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಪ್ರಿಯಾಂಕಾ ರೂಮ್ ಚೆಕ್ಔಟ್ ಮಾಡಿ ಊರಿಗೆ ವಾಪಸಾಗಿದ್ದಳು. ಆದರೆ, ರೂಮ್ನಲ್ಲಿತೇ ಇದ್ದ ತಕ್ಷಿತ್ ಮಲಗಿದ್ದಲ್ಲಿಯೇ ಹೆಣವಾಗಿ ಹೋಗಿದ್ದಾನೆ.
ನಿನ್ನೆ ತಡರಾತ್ರಿ ಸಿಬ್ಬಂದಿ ರೂಮಿನ ಬಾಗಿಲು ತಟ್ಟಿದ್ದಾನೆ. ಆದರೆ ತಕ್ಷಿತ್ನ ರೂಮಿಂದ ಯಾವುದೇ ರೆಸ್ಫಾನ್ಸ್ ಬಂದಿಲ್ಲ. ಮಾಸ್ಟರ್ ಕೀ ಬಳಸಿ ರೂಂ ಬಾಗಿಲು ತೆರೆದಾಗ ಬೆಡ್ ಮೇಲೆ ತಕ್ಷಿತ್ ಮೃತದೇಹ ಪತ್ತೆಯಾಗಿದೆ. ತಕ್ಷಣ ಸಿಬ್ಬಂದಿ ಮಡಿವಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಲಾಡ್ಜ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುಡಿಆರ್ ಪ್ರಕರಣ ದಾಖಲಾಗಿದ್ದು, ಲಾಡ್ಜ್ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.