Vijayapura: ವಿಜಯಪುರದಲ್ಲಿ ಪೊಲೀಸರ ಗುಂಡಿಗೆ ರೌಡಿಶೀಟರ್ ಬಲಿ
ಪೊಲೀಸರ ಗುಂಡಿಗೆ ರೌಡಿಶೀಟರ್ ಬಲಿಯಾಗಿರುವ ಘಟನೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದಲ್ಲಿ ಹೊರ ಭಾಗದಲ್ಲಿ ನಡೆದಿದೆ. ಯುನಸ್ ಪಟೇಲ್ (35) ಎನ್ಕೌಂಟರ್ಗೆ ಬಲಿಯಾದ ನಟೋರಿಯಸ್ ರೌಡಿ.
ವಿಜಯಪುರ ನಗರದ ಗಾಂಧಿ ಚೌಕ್ ವ್ಯಾಪ್ತಿಯಲ್ಲಿ ನಿನ್ನೆ ವ್ಯಕ್ತಿಯೋರ್ವರಿಗೆ ಚಾಕು ತೋರಿಸಿ 25 ಸಾವಿರ ಹಣ ಕಸಿದು, ನಂತರ ಆತನ ಸ್ಕೂಟಿಯನ್ನೇ ದರೋಡೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರೋ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಸೆರೆ ಹಿಡಿಯಲು ತೆರಳಿದ್ದರು. ಸಿಂದಗಿ ತಾಲೂಕಿನ ರಾಂಪುರ್ ಬಳಿ ಆರೋಪಿ ಯುನಸ್ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಇಬ್ಬರು ಕಾನ್ಸ್ಟೇಬಲ್ ಹಾಗೂ ಇನ್ಸ್ಪೆಕ್ಟರ್ ಮೇಲೆ ಆರೋಪಿ ದಾಳಿಗೆ ಯತ್ನಿಸಿದ್ದಾನೆ. ಆಗ ಆಯತಪ್ಪಿ ಇನ್ಸ್ಪೆಕ್ಟರ್ ಪ್ರದೀಪ್ ತಳಕೇರಿ ಬಿದ್ದಿದ್ದಾರೆ. ಆಗ ಆತ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಎಚ್ಚರಿಕೆ ನೀಡಲು ಇನ್ಸ್ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಶರಣಾಗದೇ ಯುನಸ್ ಹಲ್ಲೆಗೆ ಯತ್ನಿಸಿದ್ದಾನೆ.
ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿ ಯುನಸ್ ಕಾಲಿಗೆ ಇನ್ಸ್ಪೆಕ್ಟರ್ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಯನ್ನ ಸಿಂದಗಿ ತಾಲೂಕು ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಯುನಸ್ ಮೇಲೆ ಎರಡು ಕೊಲೆ ಪ್ರಕರಣ, ಒಂದು ಕೊಲೆ ಯತ್ನ, ಸೇರಿದಂತೆ ಒಟ್ಟು 12 ಪ್ರಕರಣಗಳಿವೆ.