Karwar: ಮೀನು ಚುಚ್ಚಿ ಯುವಕ ಸಾವು

ಮೀನುಗಾರಿಕೆಗೆ ತೆರಳಿದ್ದ ಯುವಕನೊಬ್ಬ ಕಾಂಡೆ ಮೀನು ಮೂತಿ ಚುಚ್ಚಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ದಂಡೇಭಾಗದಲ್ಲಿ ನಡೆದಿದೆ.

ಮಾಜಾಳಿಯ ದಾಂಡೇಭಾಗದ ಅಕ್ಷಯ್ ಅನಿಲ್ ಮಾಜಾಳಿಕರ್‌ ಮೀನಿನಿಂದ ಬಲಿ ಆಗಿರುವ ನತದೃಷ್ಟ ಯುವಕ.
ಅಕ್ಟೋಬರ್ 14 ರಂದು ಅಕ್ಷಯ್ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ನೀರಿನಿಂದ ನೆಗೆದ ಸುಮಾರು 8 ರಿಂದ 10 ಇಂಚು ಉದ್ದದ ‘ಕಾಂಡೆ’ ಎಂಬ ಚೂಪು ಮೂಗಿನ ಮೀನು ನೇರವಾಗಿ ಅವರ ಹೊಟ್ಟೆಗೆ ಚುಚ್ಚಿದೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಗೊಂಡ ಯುವಕನನ್ನು ತಕ್ಷಣವೇ ಕಾರವಾರದ ಕ್ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಯುವಕನಿಗೆ ವೈದ್ಯರು ಹೊಟ್ಟೆಯ ಭಾಗದ ಗಾಯಕ್ಕೆ ಹೊಲಿಗೆ ಹಾಕಿದ್ದರು. ತೀವ್ರ ನೋವಿದ್ದ ಪರಿಣಾಮ ಅಕ್ಷಯ್ ಆಸ್ಪತ್ರೆಯಲ್ಲೇ ವೈದ್ಯಕೀಯ ನಿಗಾದಲ್ಲಿ ಉಳಿದುಕೊಂಡಿದ್ದರು. ಮೀನಿನ ಮೂತಿ ಚುಚ್ಚಿದ್ದರಿಂದ ಯುವಕನ ಕರುಳಿಗೂ ಗಾಯವಾಗಿದ್ದ ಪರಿಣಾಮ ನಿನ್ನೆ ರಾತ್ರಿ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ವೈದ್ಯರ ನಿರ್ಲ್ಯಕ್ಷದಿಂದಲೇ ಯುವಕ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನಲೆ ಆಸ್ಪತ್ರೆ ಸುತ್ತಾ ಯುವಕನ ಸಂಬಂಧಿಕರು ಜಮಾಯಿಸಿದ್ದು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Rakesh arundi

Leave a Reply

Your email address will not be published. Required fields are marked *