Murder: ಇನ್ಸ್ಟಾದಲ್ಲಿ ಪ್ರೀತಿಸಿ 2ನೇ ಮದುವೆ: ಗಂಡನಿಂದ ಪ್ರಾಣ ಕಳೆದುಕೊಂಡ ಮಹಿಳೆ
ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಕರೆಂಟ್ ಶಾಕ್ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ ಪತಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಬೆಂಗಳೂರಿನ ಶಿಕಾರಿಪಾಳ್ಯದ ಓಂ ಶಕ್ತಿ ಲೇಔಟ್ನಲ್ಲಿ ನಡೆದಿದೆ.
ರೇಷ್ಮಾ (32)ಮೃತ ಮಹಿಳೆ. ಪ್ರಶಾಂತ್ ಕುಮಾರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ನಗರದ ಶಿಕಾರಿಪಾಳ್ಯದ ಓಂ ಶಕ್ತಿ ಲೇಔಟ್ ನಲ್ಲಿ ವಾಸವಾಗಿದ್ದರು. ಮೃತ ಮಹಿಳೆ ರೇಷ್ಮಾಗೆ ಮದುವೆಯಾಗಿ ಪತಿ ಸಾವನ್ನಪ್ಪಿದ್ದ. ತನ್ನ 15 ವರ್ಷದ ಮಗಳೊಂದಿಗೆ ರೇಷ್ಮಾ ಶಿಕಾರಿಪಾಳ್ಯದ ಓಂಶಕ್ತಿ ಲೇಔಟ್ನಲ್ಲಿ ವಾಸವಾಗಿದ್ದರು. ಇದೇ ವೇಳೆ ಇನ್ಸ್ಟಾಗ್ರಾಂನಲ್ಲಿ ಆರೋಪಿ ಪ್ರಶಾಂತ್ ಕುಮಾರ್ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೀತಿಯಾಗಿ ಕಳೆದ 9 ತಿಂಗಳ ಹಿಂದೆ ಮದುವೆಯಾಗಿದ್ದರು.
ಮದುವೆಯಾದ ಮೇಲೆ ಪ್ರಶಾಂತ್ ಪತ್ನಿ ಶೀಲ ಶಂಕಿಸುತ್ತಿದ್ದು, ಪ್ರತಿದಿನ ಜಗಳವಾಡುತ್ತಿದ್ದ. ಅ.15ರಂದು ಇಬ್ಬರ ಮಧ್ಯೆ ಜಗಳ ತಾರಕಕ್ಕೇರಿತ್ತು. ಗಲಾಟೆಯಲ್ಲಿ ರೇಷ್ಮಾಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಅನುಮಾನ ಬಾರದಂತೆ ಬಾತ್ರೂಮ್ನಲ್ಲಿ ಮೃತದೇಹ ಹಾಕಿ, ವಾಟರ್ ಹೀಟರ್ ಸ್ವೀಚ್ ಅನ್ ಮಾಡಿ ಅಲ್ಲಿಂದ ಪರಾರಿಯಾಗಿದ್ದ.
ಶಾಲೆ ಮುಗಿಸಿ ಮನೆಗೆ ಬಂದಿದ್ದ ರೇಷ್ಮಾ ಮಗಳು ಬಾತ್ರೂಮ್ ಬಾಗಿಲು ಓಪನ್ ಮಾಡಿ ನೋಡಿದಾಗ ಅಲ್ಲಿ ಸತ್ತು ಬಿದ್ದಿದ್ದ ತಾಯಿಯನ್ನ ಕಂಡು ಶಾಕ್ ಆಗಿ, ಕೂಡಲೇ ಅಕ್ಕಪಕ್ಕದವರನ್ನ ಕರೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಬಾತ್ರೂಮ್ ಚಿಲಕ ಹೊರಗಿನಿಂದ ಹಾಕಿದ್ದನ್ನು ಗಮನಿಸಿದ್ದ ಮಗಳು ಅನುಮಾನಗೊಂಡು ಕೂಡಲೇ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ತಕ್ಷಣ ಆರೋಪಿ ಪ್ರಶಾಂತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯವನ್ನು ಬಯಲಾಗಿದೆ.